ಸಕಲೇಶಪುರ: ಪಟ್ಟಣದ ಬಾಳೇಗದ್ದೆ ಬಡಾವಣೆಯಲ್ಲಿ ಇಲ್ಲಿಯ ರೋಟರಿ ಸಂಸ್ಥೆ ವತಿಯಿಂದ ಬಸ್ ನಿಲ್ದಾಣ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದು ರೋಟರಿ 3182 ಡಿಸ್ಟಿಕ್ಟ್ ಗೌರ್ನರ್ ಕೆ. ಪಾಲಕ್ಷ ಹೇಳಿದರು.
ರೋಟರಿ ಸಂಸ್ಥೆ ವತಿಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ನೂತನವಾಗಿ ಪಟ್ಟಣದಲ್ಲಿ ಮಂಗಳವಾರ ನಿರ್ಮಾಣ ಮಾಡಿರುವ ಬಸ್ ನಿಲ್ದಾಣ ಉದ್ಘಾಟಿಸಿ ಮಾತನಾಡಿದರು. ಒಂದು ಸರ್ಕಾರ ಮಾಡಬೇಕಾದ ಇಂತಹ ಕೆಲಸಗಳನ್ನು ರೋಟರಿಯಂತಹ ಒಂದು ಸೇವಾ ಸಂಸ್ಥೆಯ ಸದಸ್ಯರು ತಮ್ಮ ಸ್ವಂತ ಹಣದಿಂದ ನಿರ್ಮಾಣ ಮಾಡುವುದು ನಿಜವಾದ ಸೇವೆ. ಸಕಲೇಶಪುರದ ರೋಟರಿ ಸಂಸ್ಥೆ ವತಿಯಿಂದ ಎಲ್ಕೆಜಿಯಿಂದ 10ನೇ ತರಗತಿ ವರೆಗೆ ಶಾಲೆ, ಶ್ರವಣದೋಷ ಉಳ್ಳ ಮಕ್ಕಳ ಶಾಲೆ, ಎರಡು ಶುದ್ಧ ಕುಡಿಯುವ ನೀರಿನ ಘಟಕಗಳು, ಆಸ್ಪತ್ರೆಯಲ್ಲಿ ರೋಗಿಗಳಿಗೆ ಶುದ್ಧೀಕರಿಸಿದ ಬಿಸಿ ಮತ್ತು ತಣ್ಣೀರು, ಹೇಮಾವತಿ ಪ್ರತಿಮೆ, ಎರಡು ಬಸ್ಸು ನಿಲ್ದಾಣಗಳು ಜಿನಕ್ಕೂ ಇಂತಹ ಸೇವಾ ಚಟುವಟಿಕೆಗಳನ್ನು ನಮ್ಮ ರೋಟರಿ ಸಂಸ್ಥೆಯಿಂದ ಆಗಿದೆ ಎಂದು ಹೇಳುವುದಕ್ಕೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ ಎಂದರು.
ಡಾ.ಚನ್ನವೇಣಿ ಎಂ.ಶೆಟ್ಟಿ ಹಾಗೂ ಅವರ ಪುತ್ರ ಡಾ. ಸೋಹನ್ ಶೆಟ್ಟಿ ಅವರು ಅವರ ತಂದೆ 52 ವರ್ಷಗಳ ಕಾಲ ರೋಟರಿ ಸಂಸ್ಥೆಯಲ್ಲಿ ಸೇವೆ ಮಾಡಿದ ನೆನಪಿಗಾಗಿ ಈ ಬಸ್ ನಿಲ್ದಾಣಕ್ಕೆ 1 ಲಕ್ಷ ರೂಪಾಯಿ ದೇಣಿಗೆ ನೀಡಿರುವುದು ಅವರ ಹೃದಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ ಎಂದರು.
ಅಸಿಸ್ಟೆಂಟ್ ಗೌರ್ನರ್ ಸಿ.ಎಸ್. ಮಹೇಶ್, ಪುರಸಭಾ ಅಧ್ಯಕ್ಷೆ ಜ್ಯೋತಿ ರಾಜ್ಕುಮಾರ್ ಮಾತನಾಡಿದರು.
ಪುರಸಭಾ ಸದಸ್ಯ ಮುಖೇಶ್ ಶೆಟ್ಟಿ, ಸದಸ್ಯ್ ಮಹೇಶ್, ವಲಯ ಅರಣ್ಯ ಅಧಿಕಾರಿ ಹೆಚ್.ಆರ್. ಹೇಮಂತ್ ಕುಮಾರ್, ರೋಟರಿ ಸಂಸ್ಥೆಯ ಅಧ್ಯಕ್ಷ ಕೆ.ಜಿ. ಚಂದ್ರಶೇಖರ್, ಕಾರ್ಯದರ್ಶಿ ಬಿ.ಡಿ. ವಿಜಿತ್, ರೋಟರಿ ವಿದ್ಯಾ ಸಂಸ್ಥೆ ಅಧ್ಯಕ್ಷ ಎಂ.ಎಸ್. ವಿಜಯ್ ಶಂಕರ್, ರೋಟರಿ ಟ್ರಸ್ಟ್ ಅಧ್ಯಕ್ಷ ಎನ್.ಸಿ. ಸ್ವಾಮಿ, ಚನ್ನವೇಣಿ ಎಂ. ಶೆಟ್ಟಿ, ರೇಖಾ ಪಾಲಾಕ್ಷ, ಗುಹೆಕಲ್ಲಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ವಿಠಲ್ ಹಾಗೂ ಇತರರು ಇದ್ದರು.