- ಸ್ಮಶಾನ ಭೂಮಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮಕ್ಕೆ ಮಾಜಿ ಗ್ರಾಪಂ ಉಪಾಧ್ಯಕ್ಷ – ಬಿ. ಆರ್ ಪಾಲಾಕ್ಷ ಒತ್ತಾಯ.
ಒತ್ತುವರಿ ವಿಷಯ ತಿಳಿದಿದ್ದರೂ ಜಾಣ ಕುರುಡುತನ ಪ್ರದರ್ಶನ ತೋರುತ್ತಿರುವ ಬಾಳ್ಳುಪೇಟೆ ಗ್ರಾಮ ಪಂಚಾಯತಿ.
ಇನ್ನೂ ಮುಂದೆ ಬನವಾಸೆ ಗ್ರಾಮದಲ್ಲಿ ಮೃತ ಪಟ್ಟರೆ ತಹಸೀಲ್ದಾರ್ ಕಚೇರಿ ಮುಂದೆ ತಂದು ಇಡಲು ಗ್ರಾಮಸ್ಥರ ಚಿಂತನೆ.
ಸಕಲೇಶಪುರ : ತಾಲೂಕಿನ ಬಾಳ್ಳುಪೇಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬನವಾಸೆ ಗ್ರಾಮದಲ್ಲಿ ಸರಕಾರಿ ಗೋಮಾಳ ಒತ್ತುವರಿ ಮಾಡಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಬಾಳ್ಳುಪೇಟೆ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಬಿ. ಆರ್ ಪಾಲಾಕ್ಷ ಆಗ್ರಹಿಸಿದ್ದಾರೆ.
ಗ್ರಾಮದ ಸ. ನಂ 99 ರಲ್ಲಿ 36 ಎಕರೆ ಸರ್ಕಾರಿ ಗೋಮಾಳವಿದ್ದು ಇದರಲ್ಲಿ ಒಂದು ಎಕರೆಯನ್ನು ಸ್ಮಶಾನಕ್ಕೆ ಮೀಸಲಿಡಲಾಗಿತ್ತು ಆದರೆ ಖಾಸಗಿ ವ್ಯಕ್ತಿಗಳು ಮೀಸಲಿಟ್ಟ ಪ್ರದೇಶವನ್ನು ಕಬ್ಬಳಿಕೆ ಮಾಡಿಕೊಂಡು ಗ್ರಾಮದಲ್ಲಿ ಮೃತಪಟ್ಟವರಿಗೆ ಅಂತ್ಯಸಂಸ್ಕಾರ ನೆರೆವೇರಿಸಲು ಜಾಗವೇ ಇಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ.
ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬರು ಅಧಿಕಾರಿಗಳನ್ನು ದುರ್ಬಳಿಕೆ ಮಾಡಿಕೊಂಡು ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಬೇಲಿ ನಿರ್ಮಿಸಿಕೊಂಡು ಒತ್ತುವರಿ ಮಾಡಿದ್ದಾರೆ ಇದರ ವಿರುದ್ಧ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಒತ್ತುವರಿ ಕುರಿತು ಈಗಾಗಲೇ ಶಾಸಕರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಯಾವುದೇ ಪ್ರಯೋಜನವಾಗಿಲ್ಲ ಒತ್ತುವರಿ ಮಾಡಿಕೊಂಡಿರುವ ಖಾಸಗಿ ವ್ಯಕ್ತಿ ತನ್ನ ಹಣಬಲದಿಂದ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಅಕ್ರಮ ಎಸಗಿದ್ದಾನೆ. ಒತ್ತುವರಿ ವಿಷಯ ತಿಳಿದಿದ್ದರು ಸಹ ಬಾಳ್ಳುಪೇಟೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಮ್ಮ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿರುವುದು ವಿಪರ್ಯಾಸವಾಗಿದೆ. ಇನ್ನು ಮುಂದೆ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಊಳಲು ಸ್ಥಳವಿಲ್ಲ ಹಾಗಾಗಿ ಶವವನ್ನು ತಹಸೀಲ್ದಾರ್ ಕಚೇರಿ ಮುಂದೆ ಇಟ್ಟು ಪ್ರತಿಭಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬನವಾಸೆ ಗ್ರಾಮದಲ್ಲಿ ದಲಿತರೆ ಹೆಚ್ಚಾಗಿ ವಾಸಿಸುತ್ತಿದ್ದು ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿ ಪ್ರಭಾವಿಯಾಗಿದ್ದು ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ದಲಿತರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.