ಮುಂಬೈ: ಮಹಾಮೈತ್ರಿ ತೊರೆದು ಏಕನಾಥ್ ಶಿಂಧೆ (Eknath Shinde) ನೇತೃತ್ವದಲ್ಲಿ ಬಿಜೆಪಿ (BJP) ಜೊತೆಗೆ ಗುರುತಿಸಿಕೊಂಡಿದ್ದ 40 ಬಂಡಾಯ ಶಿವಸೇನೆ ಶಾಸಕರ ಪೈಕಿ 22 ಮಂದಿ ಶಾಸಕರು ಶೀಘ್ರದಲ್ಲಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ ಪಕ್ಷದ ಮುಖವಾಣಿ ಸಾಮ್ನಾ ಪತ್ರಿಕೆ ವರದಿ ಮಾಡಿದೆ.
ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದಲ್ಲಿ ಶುರುವಾಗಿರುವ ಬಂಡಾಯದ ಬಗ್ಗೆ ವರದಿ ಮಾಡಿರುವ ಅದು, ಶಿವಸೇನೆ (ShivaSena) ಶಾಸಕರನ್ನು ಬಿಜೆಪಿ ಸೇರಿಸಲು ಏಕನಾಥ್ ಶಿಂಧೆ ಮಾಡಿದ ತಾತ್ಕಾಲಿಕ ವ್ಯವಸ್ಥೆ ಎಂದು ಆರೋಪಿಸಿದೆ. ಅಲ್ಲದೇ ಅವರ ಮುಖ್ಯಮಂತ್ರಿ ಪದವಿ ಯಾವಾಗ ಬೇಕಾದ್ರು ತೆರವಾಗಬಹುದು ಎಂದು ಭವಿಷ್ಯ ನುಡಿದಿದೆ.
ಅಂಧೇರಿ ಪೂರ್ವ ಉಪಚುನಾವಣೆಯಲ್ಲಿ ಶಿಂಧೆ ಅವರ ಗುಂಪಿನ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಿತ್ತು. ಆದರೆ ಬಿಜೆಪಿ ಅದನ್ನು ತಪ್ಪಿಸಿದೆ. ಮಹಾರಾಷ್ಟ್ರದ ಗ್ರಾಮ ಪಂಚಾಯಿತಿ ಮತ್ತು ಸರಪಂಚ್ ಚುನಾವಣೆಯಲ್ಲಿ ಶಿಂಧೆ ಬಣದ ಯಶಸ್ಸು ಸುಳ್ಳು, ಶಿಂಧೆ ಗುಂಪಿನ ಕನಿಷ್ಠ 22 ಶಾಸಕರು ಅಸಮಾಧಾನಗೊಂಡಿದ್ದು, ಬಹುಪಾಲು ಶಾಸಕರು ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದ್ದಾರೆ ಎಂದು ಹೇಳಿದೆ.
ಏಕನಾಥ್ ಶಿಂಧೆ ಮೂಲ ಶಿವಸೇನೆ ಮತ್ತು ಮಹಾರಾಷ್ಟ್ರಕ್ಕೆ (Maharashtra) ದೊಡ್ಡ ಹಾನಿಯನ್ನುಂಟುಮಾಡಿದ್ದಾರೆ. ರಾಜ್ಯವು ಅವರನ್ನು ಕ್ಷಮಿಸುವುದಿಲ್ಲ. ಬಿಜೆಪಿ ತಮ್ಮ ಲಾಭಕ್ಕಾಗಿ ಶಿಂಧೆ ಅವರನ್ನು ಬಳಸಿಕೊಳ್ಳುವುದನ್ನು ಮುಂದುವರಿಸುತ್ತದೆ. ಸರ್ಕಾರದ ಎಲ್ಲಾ ನಿರ್ಧಾರಗಳನ್ನು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ತೆಗೆದುಕೊಳ್ಳುತ್ತಿದ್ದಾರೆ ಮತ್ತು ಸಿಎಂ ಶಿಂಧೆ ಆ ನಿರ್ಧಾರಗಳನ್ನು ಪ್ರಕಟಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.